
ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಎಂ.ಎಸ್. ಉಮೇಶ್, ನವೆಂಬರ್ 30, 2025ರಂದು ತಮ್ಮ 80ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಇಂದು ನಿಧನರಾದರು.
ಉಮೇಶ್ ಅವರು 1945ರ ಏಪ್ರಿಲ್ 22ರಂದು ಮೈಸೂರಿನಲ್ಲಿ ಜನಿಸಿದರು. ಬಾಲ್ಯದಿಂದಲೇ ರಂಗಭೂಮಿಯ ಕಡೆ ಒಲವು ಹೊಂದಿದ್ದ ಇವರು, ಪ್ರಸಿದ್ಧ ಗುಬ್ಬಿ ವೀರಣ್ಣ ಅವರ ಕಂಪನಿಯಲ್ಲಿ ಬಾಲ ಕಲಾವಿದನಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು.
ಉಮೇಶ್ 1960ರಲ್ಲಿ ತೆರೆಕಂಡ ‘ಮಕ್ಕಳ ರಾಜ್ಯ’ ಚಲನಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ತಮ್ಮ 60 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ, ಅವರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಅವರ ವಿಶಿಷ್ಟ ಸಂಭಾಷಣೆ ಶೈಲಿ, ಅಭಿನಯ ಮತ್ತು ಹಾಸ್ಯಪ್ರಜ್ಞೆ ಕನ್ನಡ ಚಿತ್ರರಸಿಕರ ಮನ ಗೆದ್ದಿತ್ತು. ‘ಗೋಲ್ಮಾಲ್ ರಾಧಾಕೃಷ್ಣ’ ಚಿತ್ರದಲ್ಲಿನ “ಅಪಾರ್ಥ ಮಾಡ್ಕೊಂಬಿಟ್ರು” ಎಂಬ ಅವರ ಡೈಲಾಗ್ ಬಹಳ ಜನಪ್ರಿಯವಾಗಿತ್ತು.
‘ಕಥಾ ಸಂಗಮ’, ‘ಗುರು ಶಿಷ್ಯರು’, ‘ಹಾಲು ಜೇನು’, ‘ವೆಂಕಟ ಇನ್ ಸಂಕಟ’ ಮುಂತಾದ ಹಲವಾರು ಚಿತ್ರಗಳಲ್ಲಿ ಅವರ ಪಾತ್ರಗಳು ಸ್ಮರಣೀಯವಾಗಿವೆ. ‘ಕಥಾ ಸಂಗಮ’ ಚಿತ್ರದಲ್ಲಿನ ನಟನೆಗಾಗಿ ಅವರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.





