
ಹೈದರಾಬಾದ್, ನ. 23: ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಮಾವೋವಾದಿ ಹಾಗೂ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಕೊನೆಗೂ ಫಲ ಸಿಕ್ಕಂತಾಗಿದೆ. ರಾಜ್ಯ ಸಮಿತಿಯ ಮೂವರು ನಕ್ಸಲ್ ನಾಯಕರು ಸೇರಿದಂತೆ 37 ಮಾವೋವಾದಿಗಳು ಶನಿವಾರ ಪೋಲಿಸರಿಗೆ ಶರಣಾಗಿದ್ದಾರೆ.
ಶರಣಾದ ನಕ್ಸಲರಲ್ಲಿ ಮೂವರು ರಾಜ್ಯ ಸಮಿತಿ ಸದಸ್ಯರು, ಮೂವರು ವಿಭಾಗೀಯ ಸಮಿತಿ ಸದಸ್ಯರು, ಒಂಬತ್ತು ಪ್ರದೇಶ ಸಮಿತಿ ಸದಸ್ಯರು ಮತ್ತು 22 ಇತರ ಸಿಪಿಐ(ಮಾವೋವಾದಿ) ಸದಸ್ಯರು ಸೇರಿದ್ದಾರೆ ಎಂದು ತೆಲಂಗಾಣ ಡಿಜಿಪಿ ಬಿ ಶಿವಧರ್ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜ್ಯ ಸಮಿತಿಯ ಮೂವರು ಸದಸ್ಯರಾದ ಕೊಯ್ಯಡ ಸಾಂಬಯ್ಯ(49), ಅಲಿಯಾಸ್ ಆಜಾದ್, ಅಪ್ಪಾಸಿ ನಾರಾಯಣ, ಅಲಿಯಾಸ್ ರಮೇಶ್ (70), ಮತ್ತು ಮುಚ್ಚಕಿ ಸೋಮದ ಶರಣಾಗಿದ್ದಾರೆ. ಸಾಂಬಯ್ಯ ಮತ್ತು ನಾರಾಯಣ ತೆಲಂಗಾಣ ಸಮಿತಿಗೆ ಸೇರಿದವರಾಗಿದ್ದರೆ, ಸೋಮದ ಮಾವೋವಾದಿಗಳ ದಂಡಕಾರಣ್ಯ ವಿಶೇಷ ವಲಯ ಸಮಿತಿಯ ಭಾಗವಾಗಿದ್ದರು.
ಶರಣಾದ ಮಾವೋವಾದಿಗಳು ಒಂದು ಎಕೆ-47 ರೈಫಲ್, ಎರಡು ಎಸ್ಎಲ್ಆರ್ ರೈಫಲ್ಗಳು, ನಾಲ್ಕು 303 ರೈಫಲ್ಗಳು, ಒಂದು ಜಿ3 ರೈಫಲ್ ಮತ್ತು 346 ಸುತ್ತುಗಳ ಜೀವಂತ ಮದ್ದುಗುಂಡುಗಳನ್ನು ಹಸ್ತಾಂತರಿಸಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರು ಮಾವೋವಾದಿಗಳನ್ನು ಮುಖ್ಯವಾಹಿನಿಗೆ ಸೇರುವಂತೆ ಮನವಿ ಮಾಡಿದ್ದರು. ನಿರಂತರ ಮಾವೋವಾದಿ ವಿರೋಧಿ ಕಾರ್ಯಾಚರಣೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮತ್ತು ಸಂಘಟನೆಯೊಳಗಿನ ಆಂತರಿಕ ಬಿರುಕುಗಳು ನಕ್ಸಲರು ಶರಣಾಗುವಂತೆ ಮಾಡಿದೆ ಎಂದು ಡಿಜಿಪಿ ಬಿ ಶಿವಧರ್ ರೆಡ್ಡಿ ಹೇಳಿದರು.





