
ಹೈದರಾಬಾದ್, ನ. 11: ಭಾರತದ ಮಾಜಿ ಕ್ರಿಕೆಟ್ ನಾಯಕ ಹಾಗೂ ಕಾಂಗ್ರೆಸ್ ನ ಹಿರಿಯ ಮುಖಂಡ ಮೊಹಮ್ಮದ್ ಅಜರುದ್ದೀನ್ ಸೋಮವಾರ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಸಚಿವ ಸಂಪುಟದಲ್ಲಿ ಆಯ್ಕೆಯಾದ ಮೊದಲ ಮುಸ್ಲಿಂ ವ್ಯಕ್ತಿಯಾಗಿ ಸೇರ್ಪಡೆಗೊಂಡರು.
2023ರ ಅಸೆಂಬ್ಲಿ ಚುನಾವಣೆಯಲ್ಲಿ ಸೋತ ಅಜರುದ್ದೀನ್ ಅವರಿಗೆ ಸರ್ಕಾರವು ರಾಜ್ಯಪಾಲರ ಕೋಟಾದ ಅಡಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯ (MLC) ಸ್ಥಾನಕ್ಕೆ ನಾಮನಿರ್ದೇಶಿಸಿತ್ತು. ಅಧಿಕಾರ ಸ್ವೀಕರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅಜರುದ್ದೀನ್, “ನನ್ನ ಕ್ರಿಕೆಟ್ ದಿನಗಳಲ್ಲಿ ನಾನು ಕೋಚ್ ಆಗಬೇಕೆಂದು ಬಯಸುತ್ತಿದ್ದೆ. ರಾಜಕೀಯ ನನ್ನ ಆಯ್ಕೆಯಾಗಿರಲಿಲ್ಲ. ಅದರೆ ಬದುಕು ಬೇರೆಯದೆ ದಿಕ್ಕಿಗೆ ಕೊಂಡೊಯ್ದುಇಲ್ಲಿಗೆ ತಲುಪಿಸಿದೆ” ಎಂದು ಹೇಳಿದರು. ಅಲ್ಲದೆ, ಎಐಸಿಸಿ ನಾಯಕರಿಗೆ ಹಾಗೂ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ತನ್ನ ಮೇಲೆ ವಿಶ್ವಾಸವಿಟ್ಟಿದ್ದಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.





