
ಬೆಂಗಳೂರು, ಜ.04: ಹೆಸರಿಗಷ್ಟೇ ನದಿ ಪಾತ್ರವಾಗಿರುವ ದಕ್ಷಿಣ ಪಿನಾಕಿನಿ ನದಿಯಲ್ಲಿ ದಶಕಗಳಿಂದ ನೀರಿನ ಹರಿವು ಸಂಪೂರ್ಣವಾಗಿ ನಿಂತಿದ್ದು, ಇಡೀ ನದಿ ಪಾತ್ರ ಒತ್ತುವರಿ ಹಾಗೂ ಹೂಳು ತುಂಬಿಕೊಂಡಿದೆ. ಇಂತಹ ಸ್ಥಿತಿಯಲ್ಲಿ ನದಿಗೆ ನ್ಯಾಯಮಂಡಳಿ ರಚಿಸುವುದಕ್ಕಿಂತ ಮೊದಲು ನದಿ ಪಾತ್ರವನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕು ಎಂದು ಪಿನಾಕಿನಿ ನದಿ ಪಾತ್ರದ ಅಭಿವೃದ್ಧಿ ವಿಚಾರದಲ್ಲಿ ತೊಡಗಿಸಿಕೊಂಡಿರುವ ವಂದೇ ಭಾರತಂ ಫೌಂಡೇಶನ್ನ ಬಿಜ್ಜವರ ಎಚ್. ಲೋಕೇಶ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನದಿ ಅಸ್ತಿತ್ವದಲ್ಲೇ ಇಲ್ಲದ ಸ್ಥಿತಿಯಲ್ಲಿ ನ್ಯಾಯಮಂಡಳಿ ರಚಿಸುವುದು ಇಲ್ಲದ ಮಗುವಿಗೆ ಕುಲಾವಿ ಹೊಲಿಸಿದಂತೆ” ಎಂದು ವ್ಯಂಗ್ಯವಾಡಿದರು. ನದಿ ಪಾತ್ರದ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಿ, ಹೂಳು ತೆಗೆದು ನೀರಿನ ಸಹಜ ಹರಿವಿಗೆ ಅವಕಾಶ ಕಲ್ಪಿಸುವುದು ತುರ್ತು ಅಗತ್ಯವಾಗಿದೆ ಎಂದರು.
ಈ ವಿಷಯವನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಆರಂಭಿಕ ಹಂತದಲ್ಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನದಿ ಪುನಶ್ಚೇತನದತ್ತ ಸ್ಪಷ್ಟ ಕಾರ್ಯಯೋಜನೆ ರೂಪಿಸಿ ಜಾರಿಗೊಳಿಸಿದರೆ ಮಾತ್ರ ದಕ್ಷಿಣ ಪಿನಾಕಿನಿಗೆ ಜೀವಂತಿಕೆ ಬರಲಿದೆ ಎಂದು ಅವರು ಎಚ್ಚರಿಸಿದರು.





