
ಬೆಂಗಳೂರು, ಡಿಸೆಂಬರ್ 19: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸರ್ಕಾರ, ಭ್ರಷ್ಟಾಚಾರ ನಿಲ್ಲಿಸಲು ಯೋಜನೆಯ ಹೆಸರು ಮತ್ತು ಸ್ವರೂಪ ಬದಲಾಯಿಸುವುದು ಹಾಸ್ಯಾಸ್ಪದ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್) ಪಕ್ಷ ಹೇಳಿದೆ.
ಯೋಜನೆಗೆ ಕೇಂದ್ರ ಸರ್ಕಾರದ ಪಾಲಿನ ಅನುದಾನ ಕಡಿತಗೊಳಿಸಿ, ರಾಜ್ಯ ಸರ್ಕಾರಗಳಿಂದ ಹೆಚ್ಚಿನ ಹಣ ಸಂಗ್ರಹಿಸುವ ತಿದ್ದುಪಡಿ ಮೂಲಕ ಭ್ರಷ್ಟಾಚಾರ ತಡೆಯುವುದು ಹೇಗೆ ಎಂದು ಕೆ.ಆರ್.ಎಸ್ ಪಕ್ಷ ಪ್ರಶ್ನಿಸಿದೆ.
ತನಿಖಾ ಸಂಸ್ಥೆಗಳ ಮೂಲಕ ಯೋಜನೆಯ ಭ್ರಷ್ಟಾಚಾರ ತಡೆಯಬೇಕಿರುವ ಕೇಂದ್ರ ಸರ್ಕಾರ , ರಾಜಕೀಯ ವಿರೋಧಿಗಳನ್ನು ತಡೆಯಲು ಬಳಸುತ್ತಿದೆ ಎಂದು ಆರೋಪಿಸಿ ಕೆ.ಆರ್.ಎಸ್ ಪಕ್ಷ ಖಂಡಿಸಿದೆ.
ರಾಜ್ಯಗಳಿಗೆ ಆರ್ಥಿಕ ಒತ್ತಡ
ತಿದ್ದುಪಡಿಯಲ್ಲಿ ರಾಜ್ಯ ಸರ್ಕಾರಗಳ ಅನುದಾನ ಹೆಚ್ಚಿಸುವ ಮೂಲಕ ಕರ್ನಾಟಕದಂತಹ ರಾಜ್ಯಗಳ ಆರ್ಥಿಕ ಸ್ವಾತಂತ್ರ್ಯ ಕಸಿಯುವ ಉದ್ದೇಶ ಹೊಂದಿದೆ ಎಂದು ಕೆ.ಆರ್.ಎಸ್ ಆರೋಪಿಸಿದೆ. ಇದರಿಂದ ಯೋಜನೆ ನಿಷ್ಕ್ರಿಯಗೊಂಡು, ಗ್ರಾಮೀಣ ರೈತರು ಭೂಮಿ ಮಾರಾಟಕ್ಕೆ ಒತ್ತಡಕ್ಕೆ ಒಳಗಾಗಿ, ಕಾರ್ಖಾನೆಗಳಿಗೆ ಭೂಮಿ ಒದಗಿಸುವ ಹಂತಕ್ಕೆ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದೆ.
ಈ ತಿದ್ದುಪಡಿ ಗ್ರಾಮೀಣ ಬಡವರ ನೆಮ್ಮದಿಯನ್ನು ಕಸಿಯುತ್ತದೆ. ಶಿಕ್ಷಣ, ಆರೋಗ್ಯ ಸೇವೆಗಳಿಗೆ ಸಂಕಷ್ಟ ಬರಲಿದೆ ಎಂದು ಎಚ್ಚರಿಸಿರುವ ಕೆ.ಆರ್.ಎಸ್, ಉದ್ಯೋಗ ಖಾತ್ರಿ ಮತ್ತು ಜಲಜೀವನ್ ಮಿಷನ್ಗೆ ಕೇಂದ್ರದ ಅನುದಾನ ವಿಳಂಬ ಮಾಡುವುದನ್ನೂ ಖಂಡಿಸಿದೆ.
ಆಗ್ರಹ
ತಿದ್ದುಪಡಿ ಮಸೂದೆಯನ್ನು ತಕ್ಷಣ ಹಿಂಪಡೆಯಿರಿ. ಭ್ರಷ್ಟಾಚಾರ ತಡೆಯಲು ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಕೆ.ಆರ್.ಎಸ್ ಪಕ್ಷ ಸರ್ಕಾರವನ್ನು ಆಗ್ರಹಿಸಿದೆ.





