ಬೆಂಗಳೂರು , ಜೂ.22: ಬಿಗ್ಬಾಸ್ ಮೂಲಕ ಜನಪ್ರಿಯತೆ ಪಡೆದಿರುವ ಹಾಸ್ಯ ನಟ ಗಿಲ್ಲಿನಟ ಇದೀಗ ನಾಯಕನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದು, ಅವರು ನಟಿಸಲಿರುವ ಹೊಸ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಲಾಗಿದೆ.
‘ಪಳಾರ್’ ಎಂದು ಹೆಸರಿಡಲಾಗಿರುವ ಈ ಚಿತ್ರದ ಶೀರ್ಷಿಕೆಯನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಜೂನ್ 21ರಂದು ಅನಾವರಣಗೊಳಿಸಿದರು. ಈ ಮೂಲಕ ಗಿಲ್ಲಿನಟ ಅವರ ಹೀರೋ ಪ್ರಯಾಣಕ್ಕೆ ಅಧಿಕೃತ ಚಾಲನೆ ದೊರೆತಿದೆ.
ಚಿತ್ರ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರದ ಪೋಸ್ಟರ್ನ್ನು ಹಂಚಿಕೊಂಡಿದ್ದು, “ನಗುವಿಗೆ ಬ್ರೇಕ್ ಸಿಗದ ವ್ಯಕ್ತಿಯನ್ನು ಭೇಟಿಯಾಗಿ” ಎಂಬ ಸಾಲಿನೊಂದಿಗೆ ಸಿನಿರಸಿಕರ ಕುತೂಹಲ ಹೆಚ್ಚಿಸಿದೆ. ಬಿಡುಗಡೆಯಾದ ಪೋಸ್ಟರ್ನಲ್ಲಿ ಗಿಲ್ಲಿನಟ ಪಂಚೆ ಧರಿಸಿ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಗಿಲ್ಲಿನಟ ನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಈ ವಿಚಾರ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ಹಾಸ್ಯ ನಟನಾಗಿ ಗುರುತಿಸಿಕೊಂಡ ಗಿಲ್ಲಿನಟ, ನಂತರ ಬಿಗ್ಬಾಸ್ ವಿಜೇತರಾಗಿ ಜನಮನ ಗೆದ್ದಿದ್ದರು. ಇತ್ತೀಚೆಗೆ ನಟ ದರ್ಶನ್ ಅಭಿನಯದ ‘ಡೆವಿಲ್’ ಚಿತ್ರದಲ್ಲೂ ಕಾಣಿಸಿಕೊಂಡಿದ್ದ ಅವರು, ಇದೀಗ ಪೂರ್ಣ ಪ್ರಮಾಣದ ನಾಯಕನಾಗಿ ಹೊಸ ಅಧ್ಯಾಯ ಆರಂಭಿಸುತ್ತಿದ್ದಾರೆ.




