ಮಾರ್ಚ್ 29ರಂದು ಬೆಂಗಳೂರಿನಲ್ಲಿ ‘ಬೀಯಿಂಗ್ ಲೈಟ್’ ಕಾರ್ಯಕ್ರಮ

0
19
Advertisement

ಬೆಂಗಳೂರು, ಮಾ.11: ಅಂತಾರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮಿಕ ಚಿಂತಕಿ ಬಿಕೆ ಶಿವಾನಿ ಅವರ ನೇತೃತ್ವದಲ್ಲಿ ಬ್ರಹ್ಮಕುಮಾರಿ ಸಮಾಜವು ಮಾರ್ಚ್ 29ರಂದು “ಬೀಯಿಂಗ್ ಲೈಟ್… ಆಲಿಸಿ, ಅನುಭವಿಸಿ, ಪ್ರಕಾಶಮಾನರಾಗಿ” ಎಂಬ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಆಯೋಜಿಸಿದೆ. ನಗರದ ಅರಮನೆ ಮೈದಾನದ ಪ್ರಿನ್ಸೆಸ್ ಶ್ರೈನ್ (ಗೇಟ್‌ 9)ನಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಆತ್ಮಾವಲೋಕನ ಮತ್ತು ಸ್ಫೂರ್ತಿಗೆ ವೇದಿಕೆಯಾಗಲಿದ್ದು, ಕುಟುಂಬ ಸಮೇತವಾಗಿ ಪಾಲ್ಗೊಳ್ಳಬಹುದಾದ ವಿಶಿಷ್ಟ ಅನುಭವವನ್ನು ನೀಡಲಿದೆ.

ಇಂದಿನ ವೇಗದ ಬದುಕಿನಲ್ಲಿ ಒತ್ತಡ, ಅತಿಯಾದ ಮಾಹಿತಿಯ ಹರಿವು ಹಾಗೂ ಮಾನಸಿಕ ಆಯಾಸ ಸಾಮಾನ್ಯವಾಗಿರುವ ಹಿನ್ನೆಲೆ, ಆಂತರಿಕ ಶಾಂತಿ ಮತ್ತು ಸ್ಪಷ್ಟತೆಯನ್ನು ನೀಡುವ ಕಾರ್ಯಕ್ರಮಗಳ ಅಗತ್ಯ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಭಾಗವಹಿಸುವವರಿಗೆ ದೈನಂದಿನ ಜಂಜಾಟಗಳಿಂದ ಸ್ವಲ್ಪ ವಿರಾಮ ನೀಡಿ, ತಮ್ಮೊಳಗಿನ ಶಕ್ತಿಯನ್ನು ಮರುಕಂಡುಕೊಳ್ಳಲು ಹಾಗೂ ಆತ್ಮಸಂಪರ್ಕ ಸಾಧಿಸಲು ಈ ಕಾರ್ಯಕ್ರಮ ಆಹ್ವಾನ ನೀಡುತ್ತಿದೆ.

ಈ ಕುರಿತು ಮಾತನಾಡಿದ ಕೋರಮಂಗಲ ಬ್ರಹ್ಮಕುಮಾರಿ ಸಮಾಜದ ಬಿಕೆ ಸಿಸ್ಟರ್ ಗೀತಾ, “ವೇಗದ ಜೀವನಶೈಲಿಯಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳು ಬಹಳ ಅಗತ್ಯ. ಸಿಸ್ಟರ್ ಶಿವಾನಿ ಅವರ ಉಪನ್ಯಾಸಗಳು ಜನರಿಗೆ ತಮ್ಮನ್ನು ತಾವು ಅರಿತುಕೊಳ್ಳಲು ಮತ್ತು ತಮ್ಮೊಳಗಿನ ಪ್ರಕಾಶವನ್ನು ಮರುಶೋಧಿಸಲು ಪ್ರೇರಣೆ ನೀಡುತ್ತವೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಕೆ ಶಿವಾನಿ ಅವರು ಎರಡು ಅವಧಿಗಳಲ್ಲಿ ಉಪನ್ಯಾಸ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಹಿಂದಿಯಲ್ಲಿ ಮತ್ತು ಸಂಜೆ 5 ಗಂಟೆಗೆ ಇಂಗ್ಲಿಷ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಸರಳ ಮತ್ತು ಆಪ್ತ ಶೈಲಿಯಲ್ಲಿ ಆಧ್ಯಾತ್ಮಿಕ ವಿಚಾರಗಳನ್ನು ವಿವರಿಸುವ ಅವರು, ಕೇಳುಗರಿಗೆ ವಿಚಾರಗಳನ್ನು ಕೇವಲ ಕೇಳುವುದಷ್ಟೇ ಅಲ್ಲದೆ ಅನುಭವಿಸುವಂತೆಯೂ ಮಾಡುತ್ತಾರೆ. ಅವರ ಬೋಧನೆಗಳು ಆಧ್ಯಾತ್ಮಿಕ ಜ್ಞಾನ ಹಾಗೂ ದೈನಂದಿನ ಬದುಕಿಗೆ ಉಪಯುಕ್ತವಾದ ಪ್ರಾಯೋಗಿಕ ಮಾರ್ಗಗಳನ್ನು ಒದಗಿಸುತ್ತವೆ. ಇದು ವ್ಯಕ್ತಿಗಳ ಆಲೋಚನೆಗಳು, ಸಂಬಂಧಗಳು ಹಾಗೂ ಸುತ್ತಲಿನ ಪರಿಸರದಲ್ಲಿ ಶಾಂತಿ ಮತ್ತು ಸಕಾರಾತ್ಮಕತೆಯನ್ನು ಬೆಳೆಸಲು ಸಹಾಯಕವಾಗುತ್ತದೆ.

ಕಾರ್ಯಕ್ರಮದ ಅಂಗವಾಗಿ “ಶಾಂತಿ ಉತ್ಸವ”ವನ್ನೂ ಆಯೋಜಿಸಲಾಗಿದ್ದು, ಇದು ಎಲ್ಲಾ ವಯಸ್ಸಿನವರಿಗೂ ಆಕರ್ಷಕ ತಾಣವಾಗಲಿದೆ. ಸದ್ಗುಣಗಳ ಆಧಾರಿತ ಆಟಗಳು, ಪ್ರಾಯೋಗಿಕ ಚಟುವಟಿಕೆಗಳು ಹಾಗೂ ಸಂವಾದಾತ್ಮಕ ಪ್ರದರ್ಶನಗಳ ಮೂಲಕ ಆಧ್ಯಾತ್ಮಿಕ ಕಲಿಕೆಯನ್ನು ಮೋಜಿನ ಜೊತೆಗೆ ಅರ್ಥಪೂರ್ಣವಾಗಿ ಅನುಭವಿಸುವ ಅವಕಾಶ ಒದಗಿಸಲಾಗುತ್ತದೆ. ಮಕ್ಕಳು, ಪೋಷಕರು ಹಾಗೂ ಹಿರಿಯರು ಒಟ್ಟಾಗಿ ಪಾಲ್ಗೊಳ್ಳಬಹುದಾದ ಕೌಟುಂಬಿಕ ವಾತಾವರಣವೂ ಇಲ್ಲಿ ರೂಪುಗೊಳ್ಳಲಿದೆ.

ಭಾವನಾತ್ಮಕ ಯೋಗಕ್ಷೇಮ, ಸಕಾರಾತ್ಮಕ ಚಿಂತನೆ ಮತ್ತು ಧ್ಯಾನದ ಕುರಿತು ನೀಡುವ ಉಪನ್ಯಾಸಗಳ ಮೂಲಕ ಸಿಸ್ಟರ್ ಶಿವಾನಿ ಅವರು ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗಿದ್ದಾರೆ. ಸಮಾಜಕ್ಕೆ ನೀಡಿದ ಅವರ ವಿಶಿಷ್ಟ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರವು ಮಹಿಳೆಯರಿಗೆ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ನಾರಿ ಶಕ್ತಿ ಪುರಸ್ಕಾರ” ನೀಡಿ ಗೌರವಿಸಿದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಶಾಂತಿ ಮತ್ತು ಸಕಾರಾತ್ಮಕತೆಯನ್ನು ಸೃಷ್ಟಿಸುವ ಸಾಮರ್ಥ್ಯವಿದೆ; ನಾವು ಆಂತರಿಕವಾಗಿ ಪ್ರಕಾಶಮಾನರಾದಾಗ ನಮ್ಮ ಸುತ್ತಲಿನ ಜಗತ್ತಿಗೂ ಬೆಳಕು ಹರಡುತ್ತೇವೆ ಎಂಬುದು ಅವರ ಸಂದೇಶವಾಗಿದೆ.

Advertisement

LEAVE A REPLY

Please enter your comment!
Please enter your name here