
ಬಳ್ಳಾರಿ : ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಆಟೋ ಚಾಲಕರು ಜೀವನಾಧಾರಕ್ಕಾಗಿ ಆಟೋಚಾಲನೆ ವೃತ್ತಿಯಲ್ಲಿದ್ದಾರೆ. ಇತ್ತೀಚೆಗೆ ರ್ಯಾಪಿಡೋ, ನಮ್ಮ ಯಾತ್ರೆ ಮುಂತಾದ ಮೊಬೈಲ್ ಬುಕ್ಕಿಂಗ್ ಆಪ್ಗಳು ಬಳ್ಳಾರಿ ನಗರದಲ್ಲಿ ಕಾರ್ಯಾರಂಭ ಮಾಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಆಟೋ ಚಾಲಕರ ಸಂಘದ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದ್ದು, “ಬಳ್ಳಾರಿ ನಗರವು ಇತರ ಮಹಾನಗರಗಳಂತೆ ವಿಸ್ತೀರ್ಣ ಹೊಂದಿಲ್ಲ. ಕೇವಲ 5 ಕಿ.ಮೀ ವ್ಯಾಪ್ತಿಯಷ್ಟೇ ಇರುವ ನಗರದಲ್ಲಿ ಈ ರೀತಿಯ ಮೊಬೈಲ್ ಆಪ್ಗಳಿಂದ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಬಡ ಆಟೋ ಚಾಲಕರ ಜೀವನಾಧಾರವೇ ಕುಸಿಯುವ ಪರಿಸ್ಥಿತಿ ಎದುರಾಗುತ್ತದೆ” ಎಂದು ತಿಳಿಸಲಾಗಿದೆ.
ಮನವಿಯಲ್ಲಿ ಉಲ್ಲೇಖಿಸಿರುವ ಅಂಶಗಳು
ಮೊಬೈಲ್ ಆಪ್ಗಳಿಂದ ಪ್ರಯಾಣಿಕರ ಸಹಕಾರ ಕಡಿಮೆ.
ಚಾಲಕರ ನಡುವೆ ಸಂಘರ್ಷ ಸೃಷ್ಟಿಯಾಗುವ ಭೀತಿ.
ಬಳ್ಳಾರಿ ನಗರದಲ್ಲಿ ಜನಸಂದಣಿ ಪ್ರದೇಶಗಳು 4-5 ವೃತ್ತಗಳಷ್ಟೇ ಇದ್ದು, ಅಲ್ಲಿ ಆಟೋಗಳು ಸದಾ ಲಭ್ಯ.

ಆದ್ದರಿಂದ ಈ ಮೊಬೈಲ್ ಬುಕ್ಕಿಂಗ್ ಆಪ್ಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಆಟೋ ಚಾಲಕರು ಆಗ್ರಹಿಸಿದ್ದಾರೆ. “7 ದಿನಗಳ ಒಳಗಾಗಿ ಕ್ರಮ ಕೈಗೊಳ್ಳದಿದ್ದರೆ ಆಟೋ ಚಾಲಕರು ಬೀದಿಗಿಳಿದು ಹೋರಾಟ ನಡೆಸುವುದರ ಹೊರತು ಬೇರೇನು ದಾರಿ ಇರುವುದಿಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
