
ಮುಂಬೈ, ಜ.28; ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವನಪ್ಪಿದ್ದಾರೆ. ವಿಮಾನದಲ್ಲಿದ್ದ ಐದು ಮಂದಿ ಮೃತಪಟ್ಟಿದ್ದಾರೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ದೃಢಪಡಿಸಿದೆ.
ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ಲಿಯರ್ಜೆಟ್–45 ಮಾದರಿಯ ಸಣ್ಣ ವಿಮಾನವು ಲ್ಯಾಂಡಿಂಗ್ಗೆ ಕೆಲವೇ ಕ್ಷಣಗಳು ಬಾಕಿ ಇರುವಾಗ ನಿಯಂತ್ರಣ ಕಳೆದುಕೊಂಡು ಬಾರಾಮತಿಯ ಹೊಲವೊಂದರಲ್ಲಿ ಪತನಗೊಂಡಿದೆ. ಬೆಳಿಗ್ಗೆ 8.10ಕ್ಕೆ ಮುಂಬೈನಿಂದ ಹೊರಟ ವಿಮಾನವು ಸುಮಾರು 8.30ರ ವೇಳೆಗೆ ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಹಿನ್ನೆಲೆ ಬಾರಾಮತಿಯಲ್ಲಿ ನಡೆಯಲಿದ್ದ ನಾಲ್ಕು ಪ್ರಮುಖ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ಪವಾರ್ ಮುಂಬೈನಿಂದ ಪ್ರಯಾಣಿಸುತ್ತಿದ್ದರು. ದುರಂತದ ಸುದ್ದಿ ತಿಳಿಯುತ್ತಿದ್ದಂತೆ ರಾಜಕೀಯ ವಲಯದಲ್ಲಿ ಶೋಕ ಮಡುಗಟ್ಟಿದ್ದು, ರಾಜ್ಯಾದ್ಯಂತ ಸಂತಾಪ ಸೂಚನೆಗಳು ವ್ಯಕ್ತವಾಗಿವೆ.
ಅಜಿತ್ ಪವಾರ್ ಅವರು ಮಹಾರಾಷ್ಟ್ರದ ರಾಜಕಾರಣದಲ್ಲಿ ದೀರ್ಘಕಾಲ ಪ್ರಭಾವಶಾಲಿ ನಾಯಕನಾಗಿ ಗುರುತಿಸಿಕೊಂಡಿದ್ದರು. ಪೃಥ್ವಿರಾಜ್ ಚವಾಣ್, ದೇವೇಂದ್ರ ಫಡ್ನವೀಸ್, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಗಳಲ್ಲಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅನುಭವ ಅವರಿಗಿದೆ.
ನವೆಂಬರ್ 2019ರಲ್ಲಿ ಎನ್ಸಿಪಿಯಲ್ಲಿ ಒಡಕು ಮೂಡಿದ ನಂತರ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿ ಉಪಮುಖ್ಯಮಂತ್ರಿಯಾದರು. ಫೆಬ್ರವರಿ 2024ರಲ್ಲಿ ಚುನಾವಣಾ ಆಯೋಗವು ಅಜಿತ್ ಪವಾರ್ ನೇತೃತ್ವದ ಬಣಕ್ಕೆ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಮಾನ್ಯತೆ ನೀಡಿತ್ತು.
ಅವರು ಪತ್ನಿ ಸುನೇತ್ರಾ ಪವಾರ್ ಹಾಗೂ ಪುತ್ರರಾದ ಜಯ್ ಮತ್ತು ಪಾರ್ಥ್ ಪವಾರ್ ಅವರನ್ನು ಅಗಲಿದ್ದಾರೆ. ಈ ದುರಂತ ಮಹಾರಾಷ್ಟ್ರ ರಾಜಕೀಯಕ್ಕೆ ಭಾರೀ ಆಘಾತ ತಂದಿದೆ.





