
ಉಡುಪಿ, ಜ. 25: ದೆಹಲಿಯಲ್ಲಿ ಜ. 26ರಂದು ನಡೆಯುವ ರಾಷ್ಟ್ರಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅಥಿತಿಯಾಗಿ ಕರ್ತವ್ಯ ಪಥದಲ್ಲಿ ಭಾಗವಹಿಸಲು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಟ್ ಬೇಲ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಜೀವಿನಿ ಸ್ವಸಹಾಯ ಸಂಘಗಳ ಒಕ್ಕೂಟದ ಉದ್ಯಮಿಯಾದ ಶ್ರೀಮತಿ ಜಯಶ್ರೀ ವಿನಯ್ ಆಯ್ಕೆಯಾಗಿದ್ದಾರೆ.
ಹಲಸಿನ ಹಣ್ಣಿಗೆ ಮೌಲ್ಯವರ್ಧನೆ (ವ್ಯಾಲ್ಯೂ ಆಡೆಡ್ ಪ್ರಾಡಕ್ಟ್ಸ್) ಮೂಲಕ ನೂತನ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿರುವ ಅವರು, ಹತ್ತಾರು ಸಂಜೀವಿನಿ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಗ್ರಾಮೀಣ ಮಹಿಳಾ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.
ಸಂಜೀವಿನಿ ಒಕ್ಕೂಟದಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಯಾಗಿ ಸ್ವಸಹಾಯ ಗುಂಪುಗಳ ರಚನೆ, ತರಬೇತಿ ಕಾರ್ಯಕ್ರಮಗಳು, ವಿವಿಧ ಅಭಿವೃದ್ಧಿ ಚಟುವಟಿಕೆಗಳ ಯಶಸ್ವಿ ಆಯೋಜನೆಯ ಮೂಲಕ ಉತ್ತಮ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿರುವ ಶ್ರೀಮತಿ ಜಯಶ್ರೀ ವಿನಯ್, ತಮ್ಮ ಪತಿ ವಿನಯ್ ಅವರೊಂದಿಗೆ ಗಣರಾಜ್ಯೋತ್ಸವದ ವಿಶೇಷ ಅಥಿತಿಯಾಗಿ ಕರ್ತವ್ಯ ಪಥದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಸಾಧನೆಗೆ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಹಾಗೂ ಪ್ಯಾನೆಲಿಸ್ಟ್, ಬಿಜೆಪಿ ಕರ್ನಾಟಕದ ರತನ್ ರಮೇಶ್ ಪೂಜಾರಿ ಅವರು ಶ್ರೀಮತಿ ಜಯಶ್ರೀ ವಿನಯ್ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ, ಗ್ರಾಮೀಣ ಮಹಿಳೆಯರ ಶ್ರಮ, ಉದ್ಯಮಶೀಲತೆ ಮತ್ತು ಸ್ವಾವಲಂಬನೆಯು ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಹೆಮ್ಮೆಯ ವಿಷಯವೆಂದು ಹೇಳಿದರು.
ಗ್ರಾಮೀಣ ಮಟ್ಟದಲ್ಲಿ ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸಿ ರಾಷ್ಟ್ರಮಟ್ಟದ ಮಾನ್ಯತೆ ಪಡೆದಿರುವುದು ಜಿಲ್ಲೆಯ ಜನತೆಗೆ ಖುಷಿ ತಂದಿದೆ.





