
ಬೆಂಗಳೂರು, ಮಾ.14: ಬಿಸಿನಿಲಿನ ತಾಪಕ್ಕೆ ಕಂಗೆಟ್ಟಿರುವ ಈ ಸಮಯದಲ್ಲಿ ರಾಜ್ಯದ ಕೆಲವು ಕಡೆ ಮಳೆಯಾಗಿದೆ. ವಿದ್ಯಾಕಾಶಿ ಧಾರವಾಡದಲ್ಲಿ ಶನಿವಾರ ಆಲಿಕಲ್ಲು ಸಹಿತ ಮಳೆಯಾಗಿದ್ದು, ಕಳೆದ ಕೆಲವು ದಿನಗಳಿಂದ ಬಿಸಿಲಿನ ತೀವ್ರತೆಗೆ ಬಳಲುತ್ತಿದ್ದ ಜನತೆಗೆ ವರುಣ ತಂಪು ನೀಡಿದ್ದಾನೆ.
ಧಾರವಾಡ ನಗರದ ವಿವಿಧ ಭಾಗಗಳಲ್ಲಿ ಸಂಜೆ ವೇಳೆ ಗುಡುಗು–ಸಿಡಿಲು ಸಹಿತ ಭಾರೀ ಮಳೆಯಾಗಿದೆ. ತೀವ್ರ ಬಿಸಿಲಿನಿಂದ ಹೈರಾಣಾಗಿದ್ದ ಜನರಿಗೆ ಈ ಮಳೆ ತುಸು ಸಮಾಧಾನ ತಂದರೂ, ಜೋರಾಗಿ ಬೀಸಿದ ಗಾಳಿಯಿಂದ ಮಾವಿನ ಬೆಳೆಗೆ ಹಾನಿಯಾಗುವ ಆತಂಕ ವ್ಯಕ್ತವಾಗಿದೆ.
ನಗರದ ಕರ್ನಾಟಕ ಕಾಲೇಜು (ಕೆಸಿಡಿ) ಮೈದಾನದಲ್ಲಿ ಆಯೋಜಿಸಿದ್ದ ಸಂಸದ ಮಹೋತ್ಸವದ ಕುಸ್ತಿ ಟೂರ್ನಿ ಮಳೆಯಿಂದಾಗಿ ಮಧ್ಯದಲ್ಲೇ ಸ್ಥಗಿತಗೊಂಡಿದೆ.
ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಹಾಗೂ ಧರ್ಮಸ್ಥಳ ಪ್ರದೇಶಗಳಲ್ಲಿ ಕೂಡ ಸಂಜೆ ಉತ್ತಮ ಮಳೆಯಾಗಿದೆ. ಮಳೆಯ ಕಾರಣದಿಂದ ಕೆಲಕಾಲ ವಾಹನ ಸವಾರರು ಸಂಚರಿಸಲು ಪರದಾಡುವಂತಾಯಿತು.
ಗುರುವಾಯನಕೆರೆ ಪ್ರದೇಶದಲ್ಲಿ ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಬಳಿಕ ಮಳೆ ಸುರಿಯಿತು. ಕಾಜೂರು ಹಾಗೂ ಕಿಲ್ಲೂರು ಭಾಗಗಳಲ್ಲಿ ಗುಡುಗು–ಸಿಡಿಲು ಮಾತ್ರ ಕಂಡುಬಂದಿದ್ದು, ಮಳೆ ಹೆಚ್ಚು ದಾಖಲಾಗಿಲ್ಲ.





