
ಕಾಸರಗೋಡು, ಏ.09: ಕಾಸರಗೋಡು ಜಿಲ್ಲೆಯ ದೇಲಂಪಾಡಿ ಗ್ರಾಮದ ಮಣಿಯೂರು ಶ್ರೀ ಶಾಸ್ತಾರ ದೇವಸ್ಥಾನದ ಜೀರ್ಣೋದ್ದಾರ ಅಂಗವಾಗಿ ನಾಗನಕಟ್ಟೆ, ರಕೇಶ್ವರಿ ಕಟ್ಟೆ ಹಾಗೂ ಬ್ರಹ್ಮರಕ್ಷಸಿ ಕಟ್ಟೆಗಳಲ್ಲಿ ಪ್ರತಿಷ್ಠಾ ಕಾರ್ಯಕ್ರಮವು ಮೇ 1ರಂದು ನಡೆಯಲಿದೆ.
ಕ್ಷೇತ್ರದ ತಂತ್ರಿವರ್ಯರಾದ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಹಾಗೂ ವೇದಮೂರ್ತಿ ಬ್ರಹ್ಮಶ್ರೀ ರವೀಶ ತಂತ್ರಿಗಳ ನಿರ್ದೇಶನದಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಸಮಿತಿ ಮನವಿ ಮಾಡಿದೆ.
ಕಾರ್ಯಕ್ರಮಗಳ ವಿವರ:
ಏಪ್ರಿಲ್ 30ರಂದು ಗುರುವಾರ ಸಂಜೆ 5 ಗಂಟೆಗೆ ಪೂರ್ಣಕುಂಭ ಸ್ವಾಗತದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ನಂತರ ಪುಣ್ಯಾಹವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷಘ್ನ ಹೋಮ, ವಾಸ್ತು ಹೋಮ ಸೇರಿದಂತೆ ವಿವಿಧ ವಿಧಿವಿಧಾನಗಳು ನಡೆಯಲಿವೆ.
ಮೇ 1ರಂದು ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ ಗಣಪತಿ ಹವನ ಮತ್ತು ಬ್ರಹ್ಮಕಲಶ ಪೂಜೆ ನಡೆಯಲಿದ್ದು, ಬೆಳಿಗ್ಗೆ 10.18ರಿಂದ 11.16ರ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ಮಹಾಪೂಜೆ ನೆರವೇರಲಿದೆ. ಬಳಿಕ ನಿತ್ಯ ನೈಮಿತ್ಯ ವಿಧಿಗಳು ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಭಕ್ತಾಧಿಗಳು ಈ ಮಹೋತ್ಸವದಲ್ಲಿ ಪಾಲ್ಗೊಂಡು ತಮ್ಮ ಶಕ್ತಿಗೆ ತಕ್ಕಂತೆ ಸಹಕಾರ ನೀಡುವಂತೆ ಸಮಿತಿ ಮನವಿ ಮಾಡಿದೆ. ಹೂವು, ಹಣ್ಣು, ತುಪ್ಪ, ಜೇನುತುಪ್ಪ, ತೆಂಗಿನಕಾಯಿ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ಭಕ್ತರಿಂದ ಸ್ವೀಕರಿಸಲಾಗುವುದು ಎಂದು ತಿಳಿಸಿದೆ.





