
ಬೆಂಗಳೂರು, ಜ.10: ಇತ್ತೀಚೆಗೆ ಹುಸಿ ಬಾಂಬ್ ಬೆದರಿಕೆಗಳು ಹೆಚ್ವಾಗುತ್ತಿದ್ದು, ಪೋಲಿಸರು ಅನಿವಾರ್ಯವಾಗಿ ಪರಿಶೀಲನೆ ನಡೆಸುವಂತಾಗಿದೆ. ಕೋಲಾರ, ಮೈಸೂರು, ಬಾಗಲಕೋಟೆ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ವಿವಿಧ ಕೋರ್ಟ್ಗಳಿಗೆ ಬಾಂಬ್ ಸ್ಫೋಟದ ಬೆದರಿಕೆ ಸಂದೇಶಗಳು ಬಂದಿದ್ದವು. ಅಲ್ಲದೆ ಲಾಲ್ ಬಾಗ್ ರಸ್ತೆಯಲ್ಲಿರುವ ಪಾಸ್ಪೋರ್ಟ್ ಕಚೇರಿಗೆ ಕೂಡ ಸ್ಫೋಟದ ಬೆದರಿಕೆ ನೀಡಲಾಗಿತ್ತು. ಈಗ, ಹೆಬ್ಬಾಳದ ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ ಬಂದಿದೆ.
ಕೇಂದ್ರೀಯ ವಿದ್ಯಾಲಯದ ಇ-ಮೇಲ್ ಐಡಿಗೆ ಕಿಡಿಗೇಡಿಗಳು ಆರ್.ಡಿ.ಎಕ್ಸ್ ಮೂಲಕ ಸ್ಫೋಟ ಮಾಡುವುದಾಗಿ ಇಮೇಲ್ ಸಂದೇಶವನ್ನು ರವಾನಿಸಿದ್ದಾರೆ. ಇ-ಮೇಲ್ ಸ್ವೀಕರಿಸಿದ ನಂತರ, ವಿದ್ಯಾಲಯದ ಪ್ರಾಂಶುಪಾಲರಾದ ಪಿ.ಎಂ. ಪ್ರಕಾಶ್ ಅವರು ಕೂಡಲೇ ಬೆಂಗಳೂರಿನ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಯಾವುದೇ ಆರ್.ಡಿ.ಎಕ್ಸ್ ಬಾಂಬ್ ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಬಾಂಬ್ ಬೆದರಿಕೆ ಮೇಲ್ನೋಟಕ್ಕೆ ಕಂಡಿದ್ದು, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





