
ಕಣ್ಣೂರು, ಏ.7: ಭಾರತದ ಗಣ್ಯ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿರುವ ರಾಜರಾಜೇಶ್ವರ ದೇವಸ್ಥಾನಕ್ಕೆ ಇತ್ತೀಚೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನಕ್ಕೆ ಆಗಮಿಸಿದ ಅನಂತ್ ಅಂಬಾನಿ ಅವರನ್ನು ಭಕ್ತರು ಹಾಗೂ ಸ್ಥಳೀಯರು ಆತ್ಮೀಯವಾಗಿ ಬರಮಾಡಿಕೊಂಡರು. ದೇವಸ್ಥಾನದಲ್ಲಿ ಪೊನ್ನುಂಕುಡಂ, ಪಟ್ಟಂ, ಥಾಲಿ, ನೆಯ್ಯಾಮೃತು ಸೇರಿದಂತೆ ವಿವಿಧ ಕಾಣಿಕೆಗಳನ್ನು ಅರ್ಪಿಸಿದ ಅವರು, ಅಶ್ವಮೇಧ ನಮಸ್ಕಾರ ಸಲ್ಲಿಸಿ ಭಕ್ತಿಭಾವ ವ್ಯಕ್ತಪಡಿಸಿದರು.
ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಮಹತ್ವದ ನೆರವಾಗಿ, 3 ಕೋಟಿ ರೂ ಮೊತ್ತದ ಚೆಕ್ ಅನ್ನು ಅವರು ಹಸ್ತಾಂತರಿಸಿದರು. ಜೊತೆಗೆ, ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಒಟ್ಟು 12 ಕೋಟಿ ರೂ ನೆರವು ನೀಡುವ ಭರವಸೆಯನ್ನು ವ್ಯಕ್ತಪಡಿಸಿದರು.
ದೇವಸ್ಥಾನದ ಪೂರ್ವಭಾಗದ ಗೋಪುರವು ಶತಮಾನಗಳ ಪಾರಂಪರ್ಯವನ್ನು ಹೊಂದಿದ್ದು, ಬಹುಕಾಲದಿಂದ ದುರಸ್ತಿ ಕಾಣದೇ ಹಾಳಾಗುತ್ತಿರುವ ಹಿನ್ನೆಲೆಯಲ್ಲಿ, ಅದರ ಪುನಃಸ್ಥಾಪನೆಗೆ ಅಗತ್ಯ ನೆರವು ಒದಗಿಸುವುದಾಗಿ ಅನಂತ್ ಅಂಬಾನಿ ಭರವಸೆ ನೀಡಿದರು. ಕಳೆದ ಹಲವು ವರ್ಷಗಳಿಂದ ಹಣಕಾಸಿನ ಕೊರತೆಯಿಂದ ಸ್ಥಗಿತಗೊಂಡಿದ್ದ ಗೋಪುರ ಪುನರ್ ನಿರ್ಮಾಣಕ್ಕೆ ಅವರ ಈ ಸಹಾಯ ಹೊಸ ದಿಶೆಯನ್ನು ಮೂಡಿಸಿದೆ.
ಇದಲ್ಲದೆ, ಪಾರ್ಕಿಂಗ್ ವ್ಯವಸ್ಥೆಯ ಅಭಿವೃದ್ಧಿ ಸೇರಿದಂತೆ ದೇವಸ್ಥಾನದ ಮೂಲಸೌಕರ್ಯ ವಿಸ್ತರಣೆಯಲ್ಲಿಯೂ ಈ ನೆರವು ಉಪಯೋಗವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಂತ್ ಅಂಬಾನಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ದೇವಸ್ಥಾನದ ಅಧಿಕಾರಿಗಳು ಹಾಗೂ ಅರ್ಚಕರು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಟಿಟಿಕೆ ದೇವಸ್ವಾಮ್ ಅಧ್ಯಕ್ಷ ಟಿ.ಪಿ. ವಿನೋದ್ ಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ಕೆ.ಪಿ. ವಿನಯನ್, ಮುಖ್ಯ ಅರ್ಚಕ ಇ.ಪಿ. ಕುಬೇರನ್ ನಂಬೂದಿರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.





