ತೆಲಂಗಾಣ; ಮಾವೋವಾದಿ ಕಮಾಂಡರ್ ದೇವ್‌ಜಿ ಪೋಲಿಸರಿಗೆ ಶರಣು!

0
3
Advertisement

ಹೈದರಾಬಾದ್, ಫೆ.23: ಉನ್ನತ ಮಾವೋವಾದಿ ಕಮಾಂಡರ್ ಹಾಗೂ ಸಂಘಟನೆಯ ಪ್ರಮುಖ ‘ತಂತ್ರಜ್ಞ’ರಾಗಿದ್ದ ತಿಪ್ಪಿರಿ ತಿರುಪತಿ ಅಲಿಯಾಸ್ ದೇವ್‌ಜಿ ಅವರು ತೆಲಂಗಾಣ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಜಗ್ತಿಯಾಲ್ ಜಿಲ್ಲೆಯವರಾದ ದೇವ್‌ಜಿ ಶರಣಾಗತಿಯು ತೆಲಂಗಾಣದಲ್ಲಿ ಮಾವೋವಾದಿ ಚಳುವಳಿಗೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ.

ದೇವ್‌ಜಿ ಶರಣಾಗತಿಯೊಂದಿಗೆ ರಾಜ್ಯದಲ್ಲಿ ಮಾವೋ ಸಂಘಟನೆಗೆ ನಾಯಕತ್ವವೇ ಇಲ್ಲದಂತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಭಾರತ–ಮಾವೋವಾದಿ ಪ್ರಧಾನ ಕಾರ್ಯದರ್ಶಿ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಮೇ 2025ರಲ್ಲಿ ನಿಧನರಾದ ಬಳಿಕ, 62 ವರ್ಷದ ದೇವ್‌ಜಿ ಅವರು ದಿವಂಗತ ಕಮ್ಯುನಿಸ್ಟ್ ನಾಯಕತ್ವದ ಉತ್ತರಾಧಿಕಾರಿಯಾಗಬಹುದು ಎಂದು ನಂಬಲಾಗುತ್ತಿತ್ತು.

ಇತ್ತೀಚಿನ ಅವಧಿಯಲ್ಲಿ ಮತ್ತೊಬ್ಬ ಹಿರಿಯ ಮಾವೋವಾದಿ ನಾಯಕ ಮಲ್ಲ ರಾಜಿ ರೆಡ್ಡಿ ಸೇರಿದಂತೆ ಸಿಪಿಐ-ಮಾವೋವಾದಿ ಸಂಘಟನೆಯ ಹಲವು ಕಾರ್ಯಕರ್ತರು ಶರಣಾಗಿರುವುದು ಗಮನಾರ್ಹ. ದೇಶದಲ್ಲಿ ನಕ್ಸಲಿಸಂ ನಿರ್ಮೂಲನೆಗೆ ಕೇಂದ್ರ ಸರ್ಕಾರ ಮಾರ್ಚ್ 2026ಕ್ಕೆ ಗಡುವು ನಿಗದಿಪಡಿಸಿರುವ ಹಿನ್ನೆಲೆಯಲ್ಲಿ, ಅದಕ್ಕೂ ಕೆಲವೇ ದಿನಗಳ ಮೊದಲು ದೇವ್‌ಜಿ ಶರಣಾಗಿರುವುದು ಮಹತ್ವ ಪಡೆದುಕೊಂಡಿದೆ. “ಶರಣಾಗತಿಯನ್ನು ಒಂದೆರಡು ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು. ದೇವ್‌ಜಿ ಪ್ರಸ್ತುತ ತೆಲಂಗಾಣ ಪೊಲೀಸರ ವಶದಲ್ಲಿದ್ದಾರೆ” ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ವರದಿಗಳ ಪ್ರಕಾರ, ದೇವ್‌ಜಿ ಅವರ ತಲೆಗೆ ರೂ.1 ಕೋಟಿ ಬಹುಮಾನ ಘೋಷಿಸಲಾಗಿತ್ತು. ಅವರು ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ, ಸಿಪಿಐ-ಮಾವೋವಾದಿಯ ಕೇಂದ್ರ ಸಮಿತಿ ಹಾಗೂ ಪೊಲಿಟ್‌ಬ್ಯೂರೋ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.
ಇದೇ ವೇಳೆ, ತೆಲಂಗಾಣ ಪೊಲೀಸ್ ಮಹಾನಿರ್ದೇಶಕ ಬಿ. ಶಿವಧರ್ ರೆಡ್ಡಿ ಅವರು ಫೆಬ್ರವರಿ 15ರಂದು ರಾಜ್ಯದಲ್ಲಿ ಉಳಿದಿರುವ ಸುಮಾರು 15 ಉಗ್ರರು ಸೇರಿದಂತೆ ಎಲ್ಲಾ ಭೂಗತ ಮಾವೋವಾದಿ ನಾಯಕರು ಹಾಗೂ ಕಾರ್ಯಕರ್ತರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದ್ದರು. ಶರಣಾಗತಿ ಮತ್ತು ಪುನರ್ವಸತಿ ಯೋಜನೆಯಡಿ ತಕ್ಷಣದ ನೆರವು ಹಾಗೂ ವಿವಿಧ ಪ್ರಯೋಜನಗಳನ್ನು ಒದಗಿಸಲಾಗುವುದು ಎಂದೂ ಅವರು ತಿಳಿಸಿದ್ದರು.

ಕಳೆದ ಎರಡು ವರ್ಷಗಳಲ್ಲಿ ತೆಲಂಗಾಣ ಪೊಲೀಸರ ನಿರಂತರ ಕಾರ್ಯಾಚರಣೆಗಳ ಫಲವಾಗಿ 588 ಮಾವೋವಾದಿ ನಾಯಕರು ಮತ್ತು ಕಾರ್ಯಕರ್ತರು ಸಾಮಾನ್ಯ ಜೀವನಕ್ಕೆ ಮರಳಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Advertisement

LEAVE A REPLY

Please enter your comment!
Please enter your name here