
ಬೆಂಗಳೂರು, ಫೆ.21: ಮುಂದಿನ ದಿನಗಳಲ್ಲಿ ಪರದೆಯ ಮೇಲೆ ನ್ಯಾಯಾಧೀಶರಂತೆ ಕಾಣುವ ಡಿಜಿಟಲ್ ಟ್ವಿನ್ಗಳು ಬಂದರೂ ಅಚ್ಚರಿ ಪಡಬೇಕಿಲ್ಲ. ತಂತಜ್ಞಾನ ಕ್ಷೇತ್ರದಲ್ಲಿ ಭಾರಿ ಆವಿಷ್ಕಾರಗಳು ನಡೆಯುತ್ತಿರುವುದರಿಂದ ಕಾನೂನು ವೃತ್ತಿಯಲ್ಲಿ ಎಐ ಬಳಕೆ ಅನಿವಾರ್ಯ ಎಂದು ವಂದೇ ಭಾರತಂ ಫೌಂಡೇಶನ್ನ ಸ್ಥಾಪಕ ಅಧ್ಯಕ್ಷ ಬಿಜ್ಜವರ ಎಚ್. ಲೋಕೇಶ್ ಹೇಳಿದರು. ಕಾನೂನು ವೃತ್ತಿಗೆ ನೆರವಾಗುವ ಕೃತಕ ಬುದ್ಧಿಮತ್ತೆ (AI) ಆಧಾರಿತ ನೂತನ ಪರಿಹಾರಗಳನ್ನು ನೀಡುವ ಉದ್ದೇಶದಿಂದ ಒಮಿಲೋಸ್ ಸೊಲ್ಯೂಷನ್ಸ್ ಸಂಸ್ಥೆಯು ಸಿದ್ಧಪಡಿಸಿರುವ Vakeels.ai ಮತ್ತು Legal Snaps.info ಎಂಬ ಹೊಸ ಎಐ ತಂತ್ರಜ್ಞಾನದ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತಾಡಿದರು.
ಈ ಕಾರ್ಯಕ್ರಮವು ಶುಕ್ರವಾರ, ಫೆಬ್ರವರಿ 20 ರಂದು ಬೆಂಗಳೂರಿನ ಕೆ.ಆರ್. ಸರ್ಕಲ್ನ ದಿ ಸೆಂಚುರಿ ಕ್ಲಬ್ನಲ್ಲಿ ನಡೆಯಿತು. “Vakeels.ai ಆಪ್ನ ಟ್ರಯಲ್ ರನ್ಗಾಗಿ ಚಂದಾದಾರರಾಗುವಂತೆ ಸುರೇಶ್ ಜಯರಾಮ್ ಅವರು ಕೇಳಿದಾಗ, ನಾನು ಹಣ ಕೊಟ್ಟೇ ಚಂದಾದಾರನಾಗುತ್ತೇನೆ ಎಂದು ಹೇಳಿದೆ. ಯಾಕೆಂದರೆ ಇಂತಹ ಹೊಸ ಪ್ರಯತ್ನಕ್ಕೆ ನಾವು ಜೊತೆಯಾಗಿ ನಿಲ್ಲಬೇಕು. ಇಂದು ಹೆಮ್ಮೆಯಿಂದ ಹೇಳಬಲ್ಲೆ, ನಾನು ಈ ಆಪ್ನ ಮೊದಲ ಚಂದಾದಾರ. ಸುರೇಶ್ ಮತ್ತು ಅವರ ತಂಡ ಅದ್ಭುತ ಕೆಲಸ ಮಾಡಿದ್ದಾರೆ. ಈ ಆಪ್ ಬಗ್ಗೆ ಜಗತ್ತಿನಾದ್ಯಂತ ವಿಶ್ವಾಸ ಪಸರಿಸುವ ಕೆಲಸ ಮಾಡಬೇಕಿದೆ ” ಎಂದು ಬಿಜ್ಜವರ ಎಚ್. ಲೋಕೇಶ್ ಹೇಳಿದರು.

ತಂತ್ರಜ್ಞಾನವು ಅನಿವಾರ್ಯವಾಗಿರುವುದನ್ನು ಉದಾಹರಣೆಗಳ ಮೂಲಕ ವಿವರಿಸಿದ ಅವರು, “ಒಂದು ಕಾಲದಲ್ಲಿ ಕ್ಯಾಲ್ಕುಲೇಟರ್ ಬಂದಾಗ ಲೆಕ್ಕವನ್ನು ಬರೆಯುವ ಮೂಲಕ ಪರಿಶೀಲಿಸಿ ಬಳಿಕ ಬಳಕೆ ಮಾಡುತ್ತಿದ್ದೆವು. ಇಂದು ಕ್ಯಾಲ್ಕುಲೇಟರ್ ಕೂಡ ಕಾಣದ ಮಟ್ಟಿಗೆ ತಂತ್ರಜ್ಞಾನ ಬದಲಾಗಿದೆ. ಇದೇ ರೀತಿ, ಎಐ ಬಳಸದ ವಕೀಲರು ಮತ್ತು ಎಐ ಅಳವಡಿಸಿಕೊಂಡ ವಕೀಲರ ನಡುವೆ ಶೀಘ್ರದಲ್ಲೇ ಸ್ಪಷ್ಟ ವ್ಯತ್ಯಾಸ ಕಾಣಿಸಿಕೊಳ್ಳಲಿದೆ. ಮುಂದಿನ ಕೆಲ ವರ್ಷಗಳಲ್ಲಿ ಪರದೆಯ ಮೇಲೆ ನ್ಯಾಯಾಧೀಶರಂತೆ ಕಾಣುವ ಡಿಜಿಟಲ್ ಟ್ವಿನ್ಗಳೂ ಬರಬಹುದು; ಗ್ರಾಹಕರಿಗೆ ನಿಜವಾದ ವಕೀಲರೇ ಅಥವಾ ಡಿಜಿಟಲ್ ಟ್ವಿನ್ನಾ ಎಂಬ ಗೊಂದಲವೂ ಉಂಟಾಗಬಹುದು. ಅಚ್ಚರಿಪಡಬೇಡಿ,” ಎಂದರು.
“ಎಐ ಅನ್ನು ನಾವು ಹೇಗೆ ಬಳಸುತ್ತೇವೆ ಎಂಬುದೇ ಮುಖ್ಯ. ಶಸ್ತ್ರಚಿಕಿತ್ಸಕರ ಕೈಯಲ್ಲಿರುವ ಚಾಕು ಜೀವ ಉಳಿಸುತ್ತದೆ; ಅಪರಾಧಿಯ ಕೈಯಲ್ಲಿರುವ ಅದೇ ಚಾಕು ಜೀವ ಕಸಿದುಕೊಳ್ಳುತ್ತದೆ. ಎಐ ಕೂಡ ಹಾಗೆಯೇ,” ಎಂದು ಲೋಕೇಶ್ ಅವರು ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ, ಐಎಎಸ್ (ನಿವೃತ್ತ) ಕೆ. ಅಮರನಾರಾಯಣ, ಕರ್ನಾಟಕ ಸರ್ಕಾರದ ಪಿಡಬ್ಲ್ಯುಡಿ ಕಾರ್ಯದರ್ಶಿ (ನಿವೃತ್ತ) ಕೃಷ್ಣ ರೆಡ್ಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ವಿಶೇಷ ಆಹ್ವಾನಿತರಾಗಿ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಕೆ. ಗೋವಿಂದರಾಜು, ಬೆಂಗಳೂರು ನಗರ ಉತ್ತರ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಡಿ.ಎಲ್. ನಾಗೇಶ್ (ಐಪಿಎಸ್), ರುಸಾ ಪ್ರಾಜೆಕ್ಟ್ಸ್ನ ಸಿಇಒ ವಂಶಿ ಕೃಷ್ಣ ರಾಯಲ, ಸಾಯಿ ವಿಸ್ಮಿತಾ ಇನ್ಫ್ರಾಕಾನ್ಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ಎಚ್.ಎ. ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಒಮಿಲೋಸ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ನ ಸ್ಥಾಪಕ ಹಾಗೂ ಸಿಇಒ ಸುರೇಶ್ ಜಯರಾಮ್, ವಕೀಲ ಹಾಗೂ ‘ವಕೀಲರ ವಾಹಿನಿ’ ಸಂಪಾದಕ–ಪ್ರಕಾಶಕ ಡಾ. ಡಿ.ಎಂ. ಹೆಗಡೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಸುಧಾಕರ್ ಸ್ವಾಗತ ಭಾಷಣ ಮಾಡಿದರು. ಕಾರ್ಯಕ್ರಮವನ್ನು ಡಾ. ಪದ್ಮಾಕ್ಷಿ ಲೋಕೇಶ್ (ಸಿಇಒ – ಸಿಮ್ ಈವೆಂಟ್ಸ್, ವೆಲ್ನೆಸ್ ಕೋಚ್ ಹಾಗೂ ಕ್ಲಿನಿಕಲ್ ಸೈಕಾಲಜಿಸ್ಟ್) ನಿರೂಪಿಸಿದರು.





